ಉತ್ತರಪ್ರದೇಶ: ಮಾಜಿ ಸಂಸದ ಹಾಗೂ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್ ರನ್ನು ದುಷ್ಕರ್ಮಿಗಳು ಪೊಲೀಸರ ಕಸ್ಟಡಿಯಲ್ಲಿರುವಾಗಲೇ ಶೂಟೌಟ್ ಮಾಡಿ ಹತ್ಯೆಗೈದ ಉತ್ತರಪ್ರದೇಶದ ಪ್ರಯಾಗರಾಜ್ ನಗರದಲ್ಲಿ ನಡೆದಿದೆ.
ಪ್ರಯಾಗರಾಜ್ ನಗರದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದಾಗ ಅತೀಕ್ ಸಹೋದರರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಅತೀಕ್ ಅಹ್ಮದ್ ಮಾತನಾಡುತ್ತಿದ್ದಾಗಲೇ ಈ ಹತ್ಯೆ ನಡೆದಿದ್ದು, ಗುಂಡು ಹಾರಿಸುವ ದೃಶ್ಯ ವೈರಲ್ ಆಗಿದೆ.
ಅತೀಕ್ ಅಹ್ಮದ್ ಫುಲ್ಪುರ್ ಕ್ಷೇತ್ರದ ಮಾಜಿ ಸಂಸದರಾಗಿದ್ದು, ಕೊಲೆ, ಸುಲಿಗೆ, ಅಪಹರಣ ಸೇರಿದಂತೆ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿತ್ತು. ನಿನ್ನೆ ರಾತ್ರಿ ವೈದ್ಯಕೀಯ ಚಿಕಿತ್ಸೆಗಾಗಿ ಇಬ್ಬರನ್ನು ಪೊಲೀಸ್ ರಕ್ಷಣೆಯಲ್ಲಿ ಪ್ರಯಾಗ್ರಾಜ್ಗೆ ಕರೆತಂದ ವೇಳೆ ಅವರನ್ನು ಹತ್ಯೆಗೈಯಲಾಗಿದೆ.
ಗುರುವಾರವಷ್ಟೇ, ಆತೀಕ್ ಅಹ್ಮದ್ ಪುತ್ರನನ್ನು ಪೊಲೀಸರು ಎನ್ಕೌಂಟರ್ ಮಾಡಿ ಕೊಂದಿದ್ದರು. ಶನಿವಾರ ಪುತ್ರನ ಅಂತ್ಯಸಂಸ್ಕಾರ ನಡೆದಿದ್ದು, ಅದರಲ್ಲಿ ಭಾಗಿಯಾಗಲು ಅತೀಕ್ಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ, ಅದೇ ದಿನ ರಾತ್ರಿ ಅತೀಕ್ ಹತ್ಯೆಯಾಗಿದೆ.
ಪೊಲೀಸರ ಹಾಗೂ ಮಾಧ್ಯಮಗಳ ಸಮ್ಮುಖದಲ್ಲೇ ನಡೆದ ಸಹೋದರರ ಹತ್ಯೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಅತೀಕ್ ಅಹ್ಮದ್ ಅವರ 19 ವರ್ಷದ ಮಗ ಅಸದ್ ಅಹ್ಮದ್ ಮತ್ತು ಸಹಚರ ಗುಲಾಮ್ ಎಂಬಾತ ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಇವರಿಬ್ಬರೂ ವಕೀಲ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದರು.
ಇಬ್ಬರ ಸುಳಿವು ನೀಡಿದವರಿಗೆ ತಲಾ 5 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು. ಪೊಲೀಸರ ಮೇಲೆ ದಾಳಿ ನಡೆಸಿದಾಗ ಆತ್ಮರಕ್ಷಣೆಗಾಗಿ ಎನ್ಕೌಂಟರ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.