Tuesday, June 6, 2023
Homeದೇಶಹಿಂಡೆನ್‌ಬರ್ಗ್ ವರದಿಯು ಅದಾನಿ ಗ್ರೂಪ್‌ ಮೇಲಿನ ಉದ್ದೇಶಿತ ದಾಳಿಯಾಗಿದೆ: ಶರದ್ ಪವಾರ್‌

ಹಿಂಡೆನ್‌ಬರ್ಗ್ ವರದಿಯು ಅದಾನಿ ಗ್ರೂಪ್‌ ಮೇಲಿನ ಉದ್ದೇಶಿತ ದಾಳಿಯಾಗಿದೆ: ಶರದ್ ಪವಾರ್‌

ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕೆಂಬ ಪ್ರತಿಪಕ್ಷಗಳ ಆಗ್ರಹವನ್ನು ಎನ್‌ಸಿಪಿ ವಿರೋಧಿಸಿದೆ

ಅದಾನಿ ಕಂಪನಿ ಮೇಲಿನ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕೆಂದು ಮಿತ್ರಪಕ್ಷ ಕಾಂಗ್ರೆಸ್‌ ಇಡುತ್ತಿರುವ ಬೇಡಿಕೆಯನ್ನೂ ವಿರೋಧಿಸಿರುವ ಅವರು, “ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಈ ಆಗ್ರಹದಿಂದ ದೂರವಿದೆ” ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಶುಕ್ರವಾರ ಹೇಳಿದ್ದಾರೆ.

ಗೌತಮ್ ಅದಾನಿಯವರಿಗೆ ಸೇರಿದ ಎನ್‌ಡಿಟಿವಿಯೊಂದಿಗಿನ ಸಂದರ್ಶನದಲ್ಲಿ ಪವಾರ್ ಅವರು ಈ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಜನವರಿ 24 ರಂದು ಬಿಡುಗಡೆಯಾದ ಹಿಂಡೆನ್‌ಬರ್ಗ್ ರಿಸರ್ಚ್ ವರದಿಯು ಅದಾನಿ ಗುಂಪಿನ ಮೇಲೆ ಗುರುತರವಾದ ಆರೋಪಗಳನ್ನು ಮಾಡಿತು. ಸ್ಟಾಕ್ ಮ್ಯಾನಿಪ್ಯುಲೇಷನ್, ಅಕೌಂಟಿಂಗ್ ವಂಚನೆ ಮತ್ತು ಮನಿ ಲಾಂಡರಿಂಗ್‌ನಲ್ಲಿ ಅದಾನಿ ಗ್ರೂಪ್‌ ತೊಡಗಿಸಿಕೊಂಡಿದೆ ಎಂದು ವರದಿ ಬಹಿರಂಗಪಡಿಸಿತ್ತು.

“ದಾನಿ ಗ್ರೂಪ್‌ ಕುರಿತು ಇಂತಹ ಹೇಳಿಕೆಗಳನ್ನು ಇತರ ವ್ಯಕ್ತಿಗಳು ಬಹಳ ಹಿಂದೆಯೇ ನೀಡಿದ್ದರು ಮತ್ತು ಕೆಲವು ದಿನಗಳ ಕಾಲ ಸಂಸತ್ತಿನಲ್ಲಿ ಗದ್ದಲವಾಗಿತ್ತು. ಆದರೆ ಈ ಬಾರಿ ಈ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ” ಎಂದು ಪವಾರ್‌ ತಿಳಿಸಿದ್ದಾರೆ.

“ಈ ಹೇಳಿಕೆಯನ್ನು ನೀಡಿದ ಹಿಂಡೆನ್‌ಬರ್ಗ್ ಸಂಸ್ಥೆ ಬಗ್ಗೆ ನಾವು ಎಂದಿಗೂ ಕೇಳಿರಲಿಲ್ಲ… ಅವರು ದೇಶದಾದ್ಯಂತ ಗದ್ದಲವನ್ನು ಉಂಟುಮಾಡುವ ಸಮಸ್ಯೆಗಳನ್ನು ಮುಂದೆ ತಂದಾಗ ಎಲ್ಲಾ ವೆಚ್ಚವನ್ನು ದೇಶದ ಆರ್ಥಿಕತೆ ಭರಿಸುತ್ತದೆ, ನಾವು ಈ ವಿಷಯಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ದೇಶದ ಪ್ರತ್ಯೇಕ ಕೈಗಾರಿಕಾ ಗುಂಪನ್ನು ಟಾರ್ಗೆಟ್ ಮಾಡಲಾಗಿದೆ ಎಂದು ತೋರುತ್ತದೆ” ಎಂದಿದ್ದಾರೆ.

ಜಂಟಿ ಸಂಸದೀಯ ಸಮಿತಿಯ ತನಿಖೆಯನ್ನು ಮಾಡಬೇಕೆಂದು ಕಾಂಗ್ರೆಸ್‌ ಒತ್ತಾಯಿಸುತ್ತಿರುವುದೇಕೆ? ಎಂಬುದಕ್ಕೆ ಪವಾರ್‌ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.

“ಆದರೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ನೇಮಿಸಿದ ಸಮಿತಿಯು ಬಹಳ ಮಹತ್ವದ್ದಾಗಿದೆ ಎಂದು ನನಗೆ ತಿಳಿದಿದೆ. ಬಹುಶಃ ಒಂದು ಜಂಟಿ ಸಂಸದೀಯ ಸಮಿತಿ ಪ್ರಾರಂಭವಾದ ನಂತರ, ಅದರ ಕಾರ್ಯವಿಧಾನಗಳು ಪ್ರತಿದಿನವೂ ಮಾಧ್ಯಮಗಳಲ್ಲಿ ವರದಿಯಾಗುತ್ತವೆ ಎಂಬುದು ತಾರ್ಕಿಕವಾಗಿರಬಹುದು. ಬಹುಶಃ ಯಾರಾದರೂ ಎರಡು-ನಾಲ್ಕು ತಿಂಗಳವರೆಗೆ ಸಮಸ್ಯೆಯನ್ನು ಉಲ್ಬಣಗೊಳಿಸಬೇಕೆಂದು ಬಯಸಿರಬಹುದು, ಆದರೆ ಸತ್ಯವು ಎಂದಿಗೂ ಹೊರಬರುವುದಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ತನಿಖೆಗಾಗಿ ಸುಪ್ರೀಂ ಕೋರ್ಟ್ ಸ್ವತಂತ್ರ ಸಮಿತಿಯನ್ನು ರಚಿಸಿರುವಾಗ ಸಂಸದೀಯ ತನಿಖೆಗೆ ಯಾವುದೇ ಮಹತ್ವವಿಲ್ಲ ಎಂದು ಹಿರಿಯ ರಾಜಕಾರಣಿ ಪವಾರ್‌‌ ಹೇಳಿದ್ದಾರೆ.

“ಸಂಸದೀಯ ಸಮಿತಿಯನ್ನು ನೇಮಿಸಿದರೆ, ಮೇಲ್ವಿಚಾರಣೆಯು ಆಡಳಿತ ಪಕ್ಷದಲ್ಲಿರುತ್ತದೆ” ಎಂದು ಅವರು ವಿವರಿಸಿದ್ದಾರೆ. “ಈಗಿನ ಆಗ್ರಹವು ಆಡಳಿತ ಪಕ್ಷದ ವಿರುದ್ಧವಾಗಿತ್ತು, ತನಿಖೆಗಾಗಿ ನೇಮಿಸಲಾದ ಸಮಿತಿಯಲ್ಲಿ ಆಡಳಿತ ಪಕ್ಷದ ಬಹುಮತವಿದ್ದರೆ, ಸತ್ಯವು ಹೇಗೆ ಹೊರಬರುತ್ತದೆ” ಎಂದು ಪ್ರಶ್ನಿಸಿದ್ದಾರೆ.

ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಅವರನ್ನು ಟೀಕಿಸುವುದು ಸರಿಯಲ್ಲ ಎಂದಿದ್ದಾರೆ.

“ಇಂದು, ಅಂಬಾನಿ ಪೆಟ್ರೋಕೆಮಿಕಲ್ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದಾರೆ, ದೇಶಕ್ಕೆ ಇದು ಅಗತ್ಯವಿಲ್ಲವೇ? ವಿದ್ಯುತ್ ಕ್ಷೇತ್ರದಲ್ಲಿ ಅದಾನಿ ಕೊಡುಗೆ ನೀಡಿದ್ದಾರೆ. ದೇಶಕ್ಕೆ ವಿದ್ಯುತ್ ಬೇಡವೇ? ಅಂತಹ ಜವಾಬ್ದಾರಿಯನ್ನು ಹೊತ್ತುಕೊಂಡು ದೇಶದ ಹೆಸರಿಗಾಗಿ ಕೆಲಸ ಮಾಡುವವರು ಇವರು” ಎಂದು ಬಣ್ಣಿಸಿದ್ದಾರೆ.

ಪವಾರ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವು ತನ್ನದೇ ಆದ ನಿಲುವು ಹೊಂದಿರಬಹುದು. ಆದರೆ ಅದಾನಿ ಗ್ರೂಪ್ ವಿರುದ್ಧದ ಆರೋಪಗಳು ನೈಜ ಮತ್ತು ಅತ್ಯಂತ ಗಂಭೀರ ಎಂದು 19 ವಿರೋಧ ಪಕ್ಷಗಳು ಮನವರಿಕೆ ಮಾಡಿವೆ” ಎಂದಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ಭಾರತೀಯ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ಎನ್‌ಸಿಪಿ ಸೇರಿದಂತೆ ಪ್ರತಿಪಕ್ಷಗಳು ಒಗ್ಗಟ್ಟಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments