ಬೆಂಗಳೂರು: ವರ್ಷದಲ್ಲಿ ಒಂದು ದಿನ ಮಾತ್ರ ಮಹಿಳೆಯರದಲ್ಲ, ಎಲ್ಲ ೩೬೫ ದಿನವೂ ಮಹಿಳೆಯರದ್ದೇ ಆಗಿದೆ. ಮಹಿಳೆಯರಿಲ್ಲದೆ ಯಾವುದೇ ಮನೆ, ಸಮಾಜ, ದೇಶ ನಡೆಯಲು ಸಾಧ್ಯವೇ ಇಲ್ಲ ಎಂದು ವಿಜಯನಗರ ಮಾರುತಿ ಮೆಡಿಕಲ್ಸ್ ಮಾಲೀಕರಾದ ಮಹೇಂದ್ರ ಮುನ್ನೋತ್ ಹೇಳಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ಮಾರ್ಚ್ ೨೬ರ ರವಿವಾರ ಕಲಾ ಬಂದು ಫೌಂಡೇಶನ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕರ್ನಾಟಕದ ವಿವಿಧ ಕ್ಷೇತ್ರಗಳ ಸಾಧಕ ದಿಗ್ಗಜರಿಗೆ ಮಹಿಳಾ ಪ್ರಶಸ್ತಿ ಪ್ರದಾನ -೨೦೨೩ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಹೇಂದ್ರ ಮುನ್ನೋತ್ ಪಾಲ್ಗೊಂಡು ಅಭಿಮಾನದ ನುಡಿಗಳನ್ನಾಡಿದರು.
ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾ ಬಂದು ಮಾಧ್ಯಮ -೨೦೨೩ರ ಪ್ರಶಸ್ತಿ ಪ್ರಧಾನ ಕರ್ನಾಟಕ ರತ್ನ ಸ್ಮರಣ ಸಂಚಿಕೆ ಬಿಡುಗಡೆ ಮತ್ತು ವಿದ್ಯಾರ್ಥಿಗಳಿಗೆ ನಗದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿ ಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ.
ಸಮಾಜದಲ್ಲಿ ಹೆಣ್ಮಕ್ಕಳು ಶಿಕ್ಷಣ, ಸಾಹಿತ್ಯ ಮತ್ತಿತರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಸದರನ್ ಎಕನಾಮಿಸ್ಟ್, ಆಂಗ್ಲ ಪಾಕ್ಷಿಕ ಪತ್ರಿಕೆ ಸಂಪಾದಕರಾದ ಸುಶೀಲಾ ಸುಬ್ರಮಣ್ಯ ಹೇಳಿದರು.
ಕರ್ನಾಟಕ ರತ್ನ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ‘ಮೊದಲು ನಮ್ಮ ಮನಸ್ಸುಗಳು ಮತ್ತು ಮನೆಗಳಲ್ಲಿ ಸಮಾನತೆ ಬಂದಾಗ ಎಲ್ಲೆಡೆ ಬದಲಾವಣೆ ನಿರೀಕ್ಷಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಗಂಡು-ಹೆಣ್ಣು, ಜಾತಿ-ಧರ್ಮ ಎಂದೆಣಿಸದೆ ಎಲ್ಲರಿಗೂ ಸಮಾನ ಗೌರವ ನೀಡಬೇಕು. ಮಹಿಳೆಯರಿಗೆ ಅವಕಾಶಗಳು ದೊರೆತರೆ ಎಂತಹದ್ದೆ ಸಾಧನೆಗಳನ್ನು ಮಾಡಿ ನಿರೂಪಿಸಿರುವ ನಿದರ್ಶನಗಳಿವೆ. ಈ ದಿಸೆಯಲ್ಲಿ ಅವರಿಗೂ ಸಮಾನ ಅವಕಾಶ ನೀಡಬೇಕು’ ಎಂದು ತಿಳಿಸಿದರು. ಅಭಯ ಸಮಾಜ ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಕೃಷ್ಣಯ್ಯ ಮತ್ತು ಇತರರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಲಾಬಂಧು ಫೌಂಡೇಷನ್ ನಿರಂತರವಾಗಿ ಹಮ್ಮಿಕೊಂಡುಬರುತ್ತಿರುವ ಸಮಾಜಮುಖಿ ಜನಪರ ಸೇವಾ ಕಾರ್ಯಗಳಲ್ಲಿ ಅಧ್ಯಕ್ಷ ಹೆಚ್.ನರಸಿಂಹರಾಜು ತಮ್ಮ ತಂಡದೊಂದಿಗೆ ಶ್ರಮಿಸುತ್ತಿರುವುದಕ್ಕೆ ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದರು.
ಸಾಧಕರಿಗೆ ಸನ್ಮಾನ: ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರದೊಂದಿಗೆ ನಗದು ಬಹುಮಾನ ನೀಡಲಾಯಿತು.
ಬಹುಮಾನ ವಿತರಣೆ: ಕಲಾ ಬಂದು ಫೌಂಡೇಶನ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಲಾಯಿತು. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪುಟಾಣಿ ಮಕ್ಕಳು, ಬಾಲಕ, ಬಾಲಕಿಯರು ಪಾಲ್ಗೊಂಡು ನೃತ್ಯ, ಗಾಯನ ಮತ್ತಿತರ ಪ್ರತಿಭೆ ಪ್ರದರ್ಶಿಸಿದರು.
ಡಾ. ಹೆಜ್ಜಾಜಿ ಮಹದೇವ ಮತ್ತು ನೀಲಕಂಠ ಅಡಿಗ, ಗೊರೂರು ಪಂಕಜ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಅಭಯ ಸಮಾಜ ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷ ಕೃಷ್ಣಯ್ಯ, ಹಿರಿಯ ಪತ್ರಕರ್ತೆ ಶ್ರೀಮತಿ ಸುಶೀಲಾ ಸುಬ್ರಮಣ್ಯ, ಹಿರಿಯ ರಂಗಕರ್ಮಿ ರಾಮಲಿಂಗಾಚಾರ್, ಸಂಯಮ ಯೋಗ ಮಹಾವಿದ್ಯಾಲಯದ ವ್ಯವಸ್ಥಾಪಕ ಟ್ರಸ್ಟಿ ಶ್ರೀಮತಿ ಸುಮತಾರಾಣಿ, ಸಮಾಜಸೇವಕಿ ಮಲಾ ಶಿವಾನಂದ್ ಮತ್ತಿತರರು ಪಾಲ್ಗೊಂಡಿದ್ದರು.
ವರದಿ: ಕಾಶಿಬಾಯಿ. ಸಿ. ಗುತ್ತೇದಾರ