ಬೆಂಗಳೂರು: ಕೊಡಗಿಹಳ್ಳಿಯ ಎಂ. ರಘುನಾಥ್ ಅವರ ಚಿಕಿತ್ಸೆಗಾಗಿ ನೆರವು ನೀಡಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮಾಡಿದ ಮನವಿ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2 ಲಕ್ಷ ರೂ ಪರಿಹಾರ ಮಂಜೂರು ಮಾಡಿದ್ದಾರೆ.
ಬಡತನದಲ್ಲಿರುವ ರಘುನಾಥ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಅವರ ಚಿಕಿತ್ಸೆಗಾಗಿ ನಾಲ್ಕೈದು ಲಕ್ಷ ರೂ ವೆಚ್ಚ ಮಾಡಿಕೊಂಡಿದ್ದು ಸಂಕಷ್ಟದಲ್ಲಿದ್ದರು. ಈ ಕುಟುಂಬ ಕಷ್ಟದಲ್ಲಿರುವ ಬಗ್ಗೆ ಹಿರಿಯ ಪತ್ರಕರ್ತ ಐ ಎಚ್ ಸಂಗಮದೇವ ಅವರು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಗಮನಕ್ಕೆ ತಂದಿದ್ದರು.
ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡುವಂತೆ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರು ಸಲ್ಲಿಸಿದ ಮನವಿ ಪರಿಗಣಿಸಿ ಮುಖ್ಯಮಂತ್ರಿಗಳು ಪರಿಹಾರ ಮಂಜೂರು ಮಾಡಿದ್ದಾರೆ.
ಚಿತ್ರದುರ್ಗ ಪತ್ರಕರ್ತನಿಗೆ 75 ಸಾವಿರ ರೂ ನೆರವು:
ಚಿತ್ರದುರ್ಗದ ದುರ್ಗದ ಕೂಗು ಪತ್ರಿಕೆಯ ಪತ್ರಕರ್ತ ಜಿ.ಎನ್.ಬಸವರಾಜು ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಅವರ ಚಿಕಿತ್ಸೆಗಾಗಿ ಪರಿಹಾರ ಮಂಜೂರು ಮಾಡುವಂತೆ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಲ್ಲಿಸಿದ ಮನವಿ ಪರಿಗಣಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 75 ಸಾವಿರ ರೂ ಪರಿಹಾರ ಮಂಜೂರು ಮಾಡಿದ್ದಾರೆ. ಈ ಬಗ್ಗೆ ಚಿತ್ರದುರ್ಗ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಗಮನಕ್ಕೆ ತಂದಿತ್ತು.
2 ಕುಟುಂಬಗಳಿಗೆ ಪರಿಹಾರ ಮಂಜೂರು ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೆಯುಡಬ್ಲ್ಯೂಜೆ ಕೃತಜ್ಞತೆಯನ್ನು ಸಲ್ಲಿಸಿದೆ.