ಬೆಂಗಳೂರು: ವಕೀಲರ ಮೇಲಿನ ಹಲ್ಲೆ ತಡೆ ಸಂರಕ್ಷಣಾ ಕಾಯಿದೆ ರೂಪಿಸುವಂತೆ ಆಗ್ರಹಿಸಿ ಸೋಮವಾರ ರಾಜ್ಯಾದ್ಯಂತ ಎಲ್ಲ ತಾಲೂಕು, ಜಿಲ್ಲಾ ಕೋರ್ಟ್ಗಳಲ್ಲಿನ ಕಲಾಪದಿಂದ ಹೊರಗುಳಿದು ವಕೀಲರು ಪ್ರತಿಭಟನೆ ನಡೆಸಿದರು.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಬೆಂಗಳೂರು ವಕೀಲರ ಸಂಘದಿಂದ ಆನಂದರಾವ್ ವೃತ್ತದ ಗಾಂಧಿಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪ್ರತಿಭಟನಾ ನಿರತ ವಕೀಲರು, ವಕೀಲರ ರಕ್ಷಣೆಗೆ ಸರ್ಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ.
ಕಾಯಿದೆ, ಕಾನೂನು ರೂಪಿಸಿಲ್ಲ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಕೀಲರ ಮೇಲೆ ಹಲ್ಲೆಗಳು ನಡೆಯುತ್ತಿವೆ. ವಕೀಲರ ಮೇಲಿನ ಹಲ್ಲೆ ತಡೆಯಲು ಸಂರಕ್ಷಣಾ ಕಾನೂನು ರೂಪಿಸುವಂತೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು.
ಆ ಸಂದರ್ಭದಲ್ಲಿ ಅವರು ಬಜೆಟ್ನಲ್ಲಿ ರಕ್ಷಣೆ ಒದಗಿಸುವ ಸಲುವಾಗಿ ಸವಲತ್ತು ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಬಜೆಟ್ನಲ್ಲಿ ವಕೀಲರಿಗೆ ಯಾವುದೇ ಸಲವಲತ್ತುಗಳನ್ನು ಈವರೆಗೂ ಒದಗಿಸಲಿಲ್ಲ. ರಾಜ್ಯ ಸರ್ಕಾರ ಕೂಟ ಈ ಹಿಂದಿನ ಬಜೆಟ್ನಲ್ಲಿ ವಕೀಲರ ಸವಲತ್ತಿಗಾಗಿ ಏನನ್ನೂ ಘೋಷಣೆ ಮಾಡಲಿಲ್ಲ. ಹೀಗಾಗಿ ಈ ಬಜೆಟ್ನಲ್ಲಾದರೂ ಘೊಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ವಕೀಲರಿಗೆ ಏನೇ ತೊಂದರೆಯಾದರೂ ಬಾರ್ಕೌನ್ಸಿಲ್ನಿಂದ ಸೌಲಭ್ಯಗಳು ದೊರೆಯುತ್ತಿವೆಯೇ ಹೊರೆತು ಸರ್ಕಾರಗಳಿಂದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಇದರಿಂದಾಗಿ ವಕೀಲರು ತೀವ್ರ ತೊಂದರೆ ಅನುಭವಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ವಕೀಲರಿಗೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ವಕೀಲ ವೃತ್ತಿಯಲ್ಲಿ ತೊಡಗಿರುವ ಹಲವರು ಆರ್ಥಿಕ ತೊಂದರೆಯಲ್ಲಿದ್ದಾರೆ. ಇದರ ನಡೆಯೂ ತಮ್ಮ ಸೇವೆಯನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಕೀಲರ ಹಾಗೂ ಅವರ ಕುಟುಂಬಕ್ಕೆ ಪಿಂಚಣಿ ಸವಲತ್ತು ನೀಡುವಂತೆ ನಿರ್ದೇಶನ ನೀಡಬೇಕು. ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆವರಣದಿಂದ ಹೊರಟ ಪ್ರತಿಭಟನಾ ಮರೆವಣಿಗೆ ಸಿಟಿ ಸಿವಿಲ್ ಕೋರ್ಟ್ ಮಾರ್ಗವಾಗಿ ಆನಂದರಾವ್ ವೃತ್ತ ತಲುಪಿತು ಪ್ರತಿಭಟನೆ ನಡೆಸಿದರು. ಬೆಂಗಳೂರು ವಕೀಲ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರದಾನ ಕಾರ್ಯದರ್ಶಿ ಟಿ.ಜಿ. ರವಿ, ಖಜಾಂಚಿ ಎಚ್ಎಂಟಿ ಹರೀಶ್, ವಕೀಲರಾದ ಎಚ್.ಬಿ. ಶಿವರಾಜು, ಕಿರಣ್ ಕುಮಾರ್, ಬೈರಾರೆಡ್ಡಿ, ಸತ್ಯಣ್ಣ, ಕಾಂತರಾಜು ಸೇರಿದಂತೆ ಸಾವಿರಾರು ವಕೀಲರು ಇದ್ದರು.