ಮಹರ್ಷಿ ವಾಲ್ಮೀಕಿ ಜಾತ್ರೆ-2023 ; ಫೆ.8 ಮತ್ತು 9 ಎರಡು ದಿನ ರೈತ-ಮಹಿಳಾ ಗೋಷ್ಟಿ, ಉದ್ಯೋಗ ಮೇಳ, ಸಂಸ್ಕೃತಿ ವೈಭವ, ಜನಜಾಗೃತಿ ಜಾತ್ರಾ ಮಹೋತ್ಸವ
ಹರಿಹರ: ಫೆಬ್ರವರಿ 8 ರಿಂದ ಎರಡು ದಿನಗಳ ಕಾಲ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣ ದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ-2023 ಅದ್ದೂರಿ ಯಾಗಿ ಆಚರಣೆ ಮಾಡಲಾಗುವುದು ಎಂದು ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದ ಮಹಾಸ್ವಾಮಿಗಳು ತಿಳಿಸಿದರು.
ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು ಕಳೆದ ಬಾರಿ ಕರೋನ ಕಾರಣಕ್ಕಾಗಿ ಸಾಂಕೇತಿಕವಾಗಿ ವಾಲ್ಮೀಕಿ ಜಾತ್ರೆ ಆಚರಿಸಲಾಗಿತ್ತು. ಈ ಬಾರಿ ಯಾವುದೇ ಆತಂಕವಿಲ್ಲದ ಕಾರಣ ಭಕ್ತ ಜನರ ಆಗ್ರಹದ ಮೇರೆಗೆ ವಿಜೃಂಭಣೆಯಿಂದ ಆಚರಿಸಲು ನಿರ್ಣಯಿಸಲಾಗಿದೆ. ಈ ಬಾರಿಯ ಜಾತ್ರೆಯಲ್ಲಿ ಮಹಿಳಾ ಗೋಷ್ಠಿ,ಉದ್ಯೋಗ ಮೇಳ, ರೈತ ಗೋಷ್ಠಿ, ಬುಡಕಟ್ಟು ಸಾಂಸ್ಕೃತಿಕ ವೈಭವ ಮತ್ತು ಜನಜಾಗೃತಿ ಜಾತ್ರಾ ಮಹೋತ್ಸವ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
9 ರ ಗುರುವಾರ ನಡೆಯಲಿರುವ ಜನ ಜಾಗೃತಿ ಜಾತ್ರಾ ಮಹೋತ್ಸವವನ್ನು ಮುಖ್ಯಮಂತ್ರಿ ಬಸವ ರಾಜ್ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದು, ಇದೇ ವೇಳೆ ವಾಲ್ಮೀಕಿ ವಿಜಯ ಸ್ಮರಣ ಸಂಪುಟ ವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಡುಗಡೆಗೊಳಿಸುವರು ಮತ್ತು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ವಾಲ್ಮೀಕಿ ರತ್ನ ಮತ್ತು ಮದಕರಿ ನಾಯಕ ಪ್ರಶಸ್ತಿ ಗಳನ್ನು ಪ್ರಧಾನ ಮಾಡಲಿದ್ದಾರೆ.ವಾಲ್ಮೀಕಿ ರತ್ನನ ಪ್ರಶಸ್ತಿಗೆ ಪ್ರೊ, ರಂಗರಾಜ್ ವನದುರ್ಗ ಮತ್ತು ಮದಕರಿ ನಾಯಕ ಪ್ರಶಸ್ತಿಗೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಸಚಿವ ಆನಂದ ಸಿಂಗ್ ಆಯ್ಕೆಯಾಗಿದ್ದಾರೆ.
ಇದಕ್ಕೂ ಮುನ್ನ ನಡೆಯಲಿರುವ ಧರ್ಮಸಭೆ ಎಲ್ಲಿ ನಾಡಿನ ಹಲವಾರು ಜಗದ್ಗುರುಗಳು ಮಹಾ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.
ಉದ್ಯೋಗ ಮೇಳದಲ್ಲಿ ಸುಮಾರು 50 ಬಹು ರಾಷ್ಟ್ರೀಯ ಕಂಪನಿಗಳು ಭಾಗವಹಿಸಲಿದ್ದು ಬಹಳಷ್ಟು ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ. ಉದ್ಯೋಗ ಮೇಳದ ಸಂಪೂರ್ಣ ಉಸ್ತುವಾರಿ ಯನ್ನು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ವಹಿಸಿಕೊಂಡಿರುತ್ತಾರೆ.
ಮಹಿಳಾ ಗೋಷ್ಠಿಯನ್ನು ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ನಾಗಲಾಂಬಿಕಾ ದೇವಿ ಉದ್ಘಾಟನೆ ಮಾಡಲಿದ್ದಾರೆ ಈ ಕಾರ್ಯಕ್ರಮದಲ್ಲಿ ಬಹಳಷ್ಟು ಜನ ಮಹಿಳೆಯರು ಭಾಗವಹಿಸಲಿದ್ದಾರೆ. ರೈತ ಗೋಷ್ಠಿಯನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಉದ್ಘಾಟಿಸಿದರೆ,ಮಾಜಿ ಸಚಿವ ಹಾಗೂ ಶಾಸಕ ಈ ತುಕಾರಾಂ ಅಧ್ಯಕ್ಷತೆ ವಹಿಸುವರು, ಉಪನ್ಯಾಸ ವನ್ನು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ನೀಡಲಿ ದ್ದಾರೆ. ಅದೇ ರೀತಿ ಬುಡಕಟ್ಟು ಸಾಂಸ್ಕೃತಿಕ ವೈಭವವನ್ನು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಉದ್ಘಾಟಿಸು ವರು ಅಧ್ಯಕ್ಷತೆಯನ್ನು ಶಾಸಕ ಟಿ.ರಘುಮೂರ್ತಿ ವಹಿಸುವರು ಎಂಬ ಮಾಹಿತಿಯನ್ನು ತಿಳಿಸಿದರು.
ಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಹಾಗು ಶಾಸಕ ಎಸ್ ವಿ ರಾಮಚಂದ್ರ ಮಾತನಾಡಿ ಜಾತ್ರೆಗೆ 4 ರಿಂದ 5 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು ಎಲ್ಲರಿಗೂ ಮೂಲಭೂತ ಸೌಕರ್ಯದ ವ್ಯವಸ್ಥೆಯನ್ನು ಶ್ರೀಮಠ ಹಾಗೂ ಮಹೋತ್ಸವ ಸಮಿತಿ ಸಿದ್ಧತೆ ಮಾಡಿಕೊಂಡಿದೆ. ನಮ್ಮ ಪೂಜ್ಯ ಜಗದ್ಗುರುಗಳು ರಾಜ್ಯದ 161 ತಾಲೂಕುಗಳನ್ನು ಸುತ್ತಾಡಿ ಸಮಾಜದ ಬಂಧುಗಳು ಹಾಗೂ ಭಕ್ತರನ್ನು ಆಹ್ವಾನಿಸಿದ್ದಾರೆ.
ಜಾತ್ರೆಯ ಸಂದರ್ಭದಲ್ಲಿ ಸುಮಾರು ಎರಡು ಕೋಟಿಗೂ ಹೆಚ್ಚು ಖರ್ಚು ಮಾಡಿ ನಿರ್ಮಾಣ ಮಾಡಲಾದ ಮಹರ್ಷಿ ವಾಲ್ಮೀಕಿ ರಥ ಲೋಕಾರ್ಪಣೆಗೊಳ್ಳಲಿದ್ದು ಈ ರಥದಲ್ಲಿ ಭವ್ಯ ಭಾರತದ ಮಹಾನ್ ಗ್ರಂಥ ಮಹರ್ಷಿ ವಾಲ್ಮೀಕಿ ರಾಮಾಯಣದ ದರ್ಶನ ವಾಗುವ ಹಿನ್ನೆಲೆಯಲ್ಲಿ ವಾಲ್ಮೀಕಿ ರಥ ಎಂದು ನಾಮಕರಣ ಮಾಡಲಾಗಿದೆ. ಒಂದು ಸುತ್ತು ಹಾಕಿ ಇದನ್ನು ದರ್ಶನ ಮಾಡಿದರೆ ನಾವು ಸಂಪೂರ್ಣ ರಾಮಾಯಣ ಪಠಣ ಮಾಡಿ ದಂತೆ ಆಗುತ್ತದೆ ಶ್ರೀ ರಾಮದೇವರ ಬಾಲ್ಯದಿಂದ ಪಟ್ಟಾಭಿಷೇಕದ ವರೆಗೆ ಚಿತ್ರ ರೂಪಕ ರಥದಲ್ಲಿ ಕೆತ್ತನೆಯಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಟಿ.ರಘುಮೂರ್ತಿ, ಕೆ.ಪಿ.ಪಾಲಯ್ಯ, ಟಿ.ಓಬಳಪ್ಪ, ಕೆ.ಬಿ.ಮಂಜುನಾಥ್, ಆರ್.ದಿನೇಶ್ ಬಾಬು, ಧೂಳೆಹೊಳೆ ವಾಮದೇವ್, ರಾಜನಹಳ್ಳಿ ಭೀಮಣ್ಣ, ಜಿಗಳಿ ಆನಂದಪ್ಪ, ಮಕರಿ ಪಾಲಾಕ್ಷಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷ ಚೈತ್ರ ಲಂಕೇಶ್, ಪಾರ್ವತಿ, ಗೀತಮ್ಮ ಸೇರಿದಂತೆ ಹಲವಾರು ಮುಖಂಡರುಗಳು ಅಭಿಮಾನಿಗಳು ಭಕ್ತರು ಭಾಗವಹಿಸಿದ್ದರು.