ಈ ಶಾಲೆಯಲ್ಲಿ 50 ವಿದ್ಯಾರ್ಥಿಗಳಿದ್ದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನಾಲ್ಕು ಖಾಯಂ ಶಿಕ್ಷಕರ ಅಗತ್ಯವಿದೆ. ಆದರೆ ಈಗ ಅತಿಥಿ ಶಿಕ್ಷಕರೊಬ್ಬರಿದ್ದು, ಇನ್ನೂ ಮೂವರಿಗೆ ನಿಯೋಜನೆಯ ಮೇರೆಗೆ ಈ ಶಾಲೆಗೆ ಹಾಕಲಾಗಿದೆ. ಅವರಲ್ಲಿ ಒಬ್ಬರು ತುರ್ತು ರಜೆ ಪಡೆದರೆ, ಇನ್ನೊಬ್ಬರು ಸುದೀರ್ಘ ರಜೆಯ ಮೇಲಿದ್ದಾರೆ. ಹೀಗಾಗಿ ಇಬ್ಬರು ಶಿಕ್ಷಕರಿರುವುದರಿಂದ ಎಲ್ಲ ತರಗತಿಯ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ತೊಡಕಾಗುತ್ತದೆ.

ಈ ಕುರಿತು ಶಾಲಾಭಿವೃದ್ಧಿ ಸಮಿತಿ, ಪಾಲಕರು ಹಾಗೂ ಸಾರ್ವಜನಿಕರು ತಹಸೀಲ್ದಾರ್ ಉದಯ ಕುಂಬಾರ, ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ಸೇರಿದಂತೆ ವಿವಿಧ ಅಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ನಿಯೋಜಿಸಲಾದ ಶಿಕ್ಷಕರು ಕೂಡ ರಜೆಯಲ್ಲಿರುವುದರಿಂದ ಇದು ಮಕ್ಕಳ ಮೇಲೆ ಪರಿಣಾಮ ಉಂಟಾಗಲಿದೆ.

ಸರಕಾರ ಕನ್ನಡ ಶಾಲೆಯನ್ನು ಉಳಿಸಬೇಕು ಎಂದು ಬೊಗಳೆ ಮಾತನ್ನು ಹೇಳುತ್ತಿದೆಯೇ ಹೊರತು, ಮಕ್ಕಳಿದ್ದ ಶಾಲೆಗೂ ಶಿಕ್ಷಕರನ್ನು ಒದಗಿಸಲಾಗದ ದುಸ್ಥಿತಿ ಎದುರಾಗಿದೆ. ಹೀಗಾಗಿ ಪಾಲಕರು ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಶನಿವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದು, ತಕ್ಷಣ ಶಿಕ್ಷಕರನ್ನು ನಿಯೋಜಿಸದಿದ್ದಲ್ಲಿ ಡಿ.26 ರಂದು ಪುನೀತ ಪುತ್ಥಳಿಯ ಎದುರು ಮಕ್ಕಳೊಂದಿಗೆ ಪ್ರತಿಬಟನೆ ನಡೆಸಲಾಗುವುದು ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂತೋಷ ವಿ. ನಾಯ್ಕ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಮಂಜುಳಾ ಹರಿಕಂತ್ರ, ಪಾಲಕರಾದ ಮಂಜುಳಾ ಬಿ. ಹರಿಕಂತ್ರ, ಮಾಲಾ ಮಂಜುನಾಥ ಹರಿಕಂತ್ರ, ಆಶಾ ಸಂತೋಷ ತಾಂಡೇಲ, ಗಾಂಧಾರಿ ಹರಿಕಂತ್ರ ಸೇರಿದಂತೆ ಇತರರಿದ್ದರು.