ಬೆಂಗಳೂರು: ಕ್ರಿಸ್ಮಸ್ ಹಬ್ಬದ ಸಾಲು ಸಾಲು ರಜೆಗಳಲ್ಲಿ ಪ್ರವಾಸಕ್ಕೆ ತೆರಳುವ ಯೋಚನೆಯಲ್ಲಿ ಇರುವವರಿಗೆ ಖಾಸಗಿ ಬಸ್ ಪ್ರಯಾಣ ದರ ಏರಿಕೆ ಬಿಸಿ ತಟ್ಟಿದೆ. ಸಾಮಾನ್ಯ ದಿನಗಳ ದರಕ್ಕೆ ಹೋಲಿಸಿದರೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಲಾಗಿದ್ದು, ವಿಮಾನ ಪ್ರಯಾಣದಷ್ಟೇ ದುಬಾರಿಯಾಗಿದೆ.
ಕ್ರಿಸ್ಮಸ್ ರಜೆಗೆ ಕೇರಳ, ಗೋವಾ, ಆಂಧ್ರಪ್ರದೇಶ ಸೇರಿ ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆಯೇ ಹೆಚ್ಚಿದೆ. ಇದನ್ನೇ ನೋಡಿಕೊಂಡು ಬೇಡಿಕೆ ಇರುವ ಮಾರ್ಗಗಳಲ್ಲೇ ಪ್ರಯಾಣ ದರ ಹೆಚ್ಚಿಸಲಾಗಿದೆ.
ಹುಬ್ಬಳ್ಳಿ ಮತ್ತು ಬೆಳಗಾವಿಗೆ ಶುಕ್ರವಾರ(ಡಿ.23) ಪ್ರಯಾಣ ಮಾಡುವವರಿಗೆ ಗರಿಷ್ಠ ದರ ₹5,000 ಇದೆ. ಗೋವಾಕ್ಕೆ ಕೆಲವು ಬಸ್ಗಳಲ್ಲಿ ₹7 ಸಾವಿರ ಇದ್ದರೆ, ಕೆಲ ಬಸ್ಗಳಲ್ಲಿ ₹5467 ಪ್ರಯಾಣ ದರ ಇದೆ.
ಬೆಂಗಳೂರಿನಿಂದ ಎರ್ನಾಕುಲಂ ಪ್ರಯಾಣಕ್ಕೂ ₹7 ಸಾವಿರ ದರ ಇದೆ. ಮಂಗಳೂರಿಗೆ ₹3,500, ಮೈಸೂರಿಗೆ ₹5,000, ಮಡಿಕೇರಿಗೆ ₹1,600 ದರ ಇದೆ. ಹುಬ್ಬಳ್ಳಿ ಮತ್ತು ಬೆಳಗಾವಿಗೆ 25ರಂದು ಪ್ರಯಾಣ ಮಾಡಲು ಟಿಕೆಟ್ ಕಾಯ್ದಿರಿಸಲು ಬಯಸಿದರೆ ₹8 ಸಾವಿರ ಗರಿಷ್ಠ ದರ ನಿಗದಿಯಾಗಿರುವುದು ವೆಬ್ಸೈಟ್ಗಳಲ್ಲಿ ಗೋಚರಿಸುತ್ತಿದೆ.
ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಾತ್ರ ಪ್ರಯಾಣ ದರ ಸಾಮಾನ್ಯ ದಿನಗಳಷ್ಟೇ ಇದೆ. ಹೊರ ರಾಜ್ಯಗಳಿಗೆ ವಿಶೇಷ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸುವುದು ಕೆಎಸ್ಆರ್ಟಿಸಿಗೆ ಕಷ್ಟದ ಕೆಲಸ. ಬೇಡಿಕೆ ಆಧರಿಸಿ ಹೆಚ್ಚುವರಿ ಬಸ್ಗಳನ್ನು ಕಾರ್ಯಾಚರಣೆ ಮಾಡಿದರೆ ಅಂತರರಾಜ್ಯ ಒಪ್ಪಂದ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಹೆಚ್ಚುವರಿ ಬಸ್ಗಳನ್ನು ಕಾರ್ಯಾಚರಣೆ ಮಾಡುವುದು ಕಷ್ಟ. ಇದರ ನಡುವೆಯೂ ಕ್ರಿಸ್ಮಸ್ ರಜೆಯಲ್ಲಿ ಪ್ರಯಾಣಿಕರಿಗೆ ಅನುಕೂಲ ಮಾಡಲು ಹೆಚ್ಚುವರಿ 300 ವಿಶೇಷ ಬಸ್ಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.
ಎಲ್ಲಿಂದ– ಎಲ್ಲಿಗೆ; ಪ್ರಯಾಣ ದರ(ಗರಿಷ್ಠ)
ಬೆಂಗಳೂರು– ಎರ್ನಾಕುಲಂ; ₹7,000
ಬೆಂಗಳೂರು– ಗೋವಾ; ₹7,000
ಬೆಂಗಳೂರು– ಮಂಗಳೂರು; ₹3,500
ಹುಬ್ಬಳ್ಳಿ– ಮೈಸೂರು; ₹5,000
ಬೆಂಗಳೂರು– ಮೈಸೂರು; ₹5,000
ಬೆಂಗಳೂರು– ಮಡಿಕೇರಿ; 1,600