ಸಂಸತ್ತಿನಲ್ಲಿ ತೇಜಸ್ವಿ ಸೂರ್ಯ ಮಾಡಿದ ‘ಈ‘ ಭಾಷಣಕ್ಕೆ ಝೆರೋದಾದ ನಿತಿನ್ ಅಭಿನಂದನೆ
ದೇಶದ ಬಹುಪಾಲು ಯುವ ಸಮೂಹಕ್ಕೆ ಹಣಕಾಸು ನಿರ್ವಹಣೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಯಾಕೆಂದರೆ ಹಣಕಾಸು ಸಾಕ್ಷರತೆ ಶಾಲೆಗಳಲ್ಲಿ ಕಲಿಸಲಾಗುತ್ತಿಲ್ಲ ಎಂದು ಸೂರ್ಯ ಲೋಕಸಭೆಯಲ್ಲಿ ಹೇಳಿದ್ದರು.
‘ಮಧ್ಯಮ ವರ್ಗದ ನೂರಾರು ಯುವಕರು ಉದ್ಯೋಗ ಮಾರುಕಟ್ಟೆಗೆ ಪ್ರವೇಶ ಮಾಡುತ್ತಾರೆ. ಆದರೆ ಅವರಿಗೆ ಹಣಕಾಸು ನಿರ್ವಹಣೆ ಕೌಶಲ್ಯದ ಪ್ರಾಮುಖ್ಯತೆ ತಿಳಿದಿಲ್ಲ. ಹೂಡಿಕೆ, ಮ್ಯೂಚುವಲ್ ಫಂಡ್, ಠೇವಣಿ, ನಿವೃತ್ತಿ ಯೋಜನೆ ಮುಂತಾದ ಮೂಲ ಹಣಕಾಸು ಕೌಶಲ್ಯಗಳನ್ನು ಶಾಲೆ ಕಾಲೇಜುಗಳಲ್ಲಿಯೇ ಕಲಿಸಬೇಕು. ಹೀಗಾದರೆ ಕೆಲಸಕ್ಕೆ ಸೇರುವಾಗಲೇ ನಿವೃತ್ತಿ ಯೋಜನೆಯನ್ನು ಹಾಕಿಕೊಳ್ಳಬಹುದು. ಹಣಕಾಸು ಸಾಕ್ಷರತೆ ಪಡೆದರೆ, ಬೇಗನೇ ಶ್ರೀಮಂತರಾಗಿ ಎನ್ನುವ ಮೋಸದಾಟದಿಂದ ತಪ್ಪಿಸಿಕೊಳ್ಳಬಹುದು‘ ಎಂದು ತೇಜಸ್ವಿ ಹೇಳಿದ್ದರು.
ತೇಜಸ್ವಿ ಸೂರ್ಯ ಅವರ ಈ ಮನವಿಗೆ ನಿತಿನ್ ಕಾಮತ್ ಅವರು ಅಭಿನಂದನೆ ಸಲ್ಲಿಸಿದ್ದು, ಇದು ಸಾಧ್ಯವಾಗಿಸಲು, ನಾವು ಶಿಕ್ಷಣ ಇಲಾಖೆಗೆ ಸಹಾಯ ಮಾಡುವುದಾಗಿಯೂ ಅವರು ಘೋಷಣೆ ಮಾಡಿದ್ದಾರೆ.
‘ಶಾಲೆಯಲ್ಲಿ ಕಲಿತ ವೃತ್ತ ಕ್ಷೇತ್ರ, ಮೆಥನಾಲ್ನ ವೈಜ್ಞಾನಿಕ ಸೂತ್ರವಾದ CH3OH ಮುಂತಾದವುಗಳೆಲ್ಲಾ ಈಗಲೂ ನೆನಪಿದೆ. ಇದೇ ಥರ, ಯಾಕೆ ಬೇಗನೇ ಹೂಡಿಕೆ ಮಾಡಬೇಕು?, ಹಣದುಬ್ಬರ, ವಿಮೆ, ನಿವೃತ್ತಿ ಯೋಜನೆ ಮುಂತಾದ ಹಣಕಾಸು ನಿರ್ವಹಣೆ ಬಗ್ಗೆ ಶಾಲೆಯಲ್ಲಿ ಕಲಿಸಿದರೆ ಜೀವನಪೂರ್ತಿ ಉಪಯೋಗಕ್ಕೆ ಬರಲಿದೆ‘ ಎಂದು ಅವರು ಹೇಳಿದ್ದಾರೆ.
‘ಈ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಕ್ಕೆ ತೇಜಸ್ವಿ ಸೂರ್ಯ ಅವರಿಗೆ ಅಭಿನಂದನೆಗಳು. ಹಣಕಾಸಿನ ಅರಿವು ನೀಡುವ ಝೆರೋದಾ ವಿಶ್ವವಿದ್ಯಾಲಯ ನಡೆಸಿ ನಮಗೆ ಅನುಭವ ಇದೆ. ಇದನ್ನು ಸಾಧ್ಯವಾಗಿಸಲು ಕೇಂದ್ರ ಶಿಕ್ಷಣ ಇಲಾಖೆಗೆ ನಾವು ಸಹಾಯ ಮಾಡಲು ಸಿದ್ಧ‘ ಎಂದು ಹೇಳಿದ್ದಾರೆ.