ಬೆಂಗಳೂರು (ಡಿ. 17): ಬಿಜೆಪಿ ಬಿರುದ್ಧ ಕಿಡಿಕಾರಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D K Shivakumar) ವಿರುದ್ಧ ಬಿಜೆಪಿ ಟ್ವೀಟ್ ಸಮರ ಸಾರಿದೆ. ಡಿಕೆ ಶಿವಕುಮಾರ್ ಅವರಿಗೆ ಭಯೋತ್ಪಾದಕರೇ (Terrorist) ಬ್ರದರ್ಸ್. ಒಬ್ಬರು ಟಿಪ್ಪು ಪರ ಮತ್ತೊಬ್ಬರು ಉಗ್ರರ ಪರ. ಕಳೆದ 70 ವರ್ಷಗಳಿಂದ ಈ ರೀತಿಯ ಓಲೈಕೆ ರಾಜಕಾರಣ (Politics) ಮಾಡಿದ್ದರಿಂದಲೇ ಇಂದು ದೇಶದಲ್ಲಿ ಕಾಂಗ್ರೆಸ್ನನ್ನು (Congress) ಹುಡುಕಬೇಕಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಡಿಕೆಶಿ ಬ್ರದರ್ ಶಾರಿಖ್!

ಸಮುದಾಯಗಳ ಓಲೈಕೆಯಲ್ಲಿ ಕಾಂಗ್ರೆಸ್ ಯಾವ ಮಟ್ಟಕ್ಕೆ ಇಳಿದಿದೆಯೆಂದರೆ, ಉಗ್ರಗಾಮಿಗಳನ್ನೂ ಮಾವನ ಮಗನಂತೆ ನೋಡುತ್ತಾರೆ. ಕಾರಣ ಇಷ್ಟೇ – ಉಗ್ರಗಾಮಿ ಮಸೂದ್ ಅಝರ್ ನನ್ನು “ಜೀ” ಎಂದು ಗೌರವಿಸಿದ ರಾಹುಲ್ ಗಾಂಧಿಯನ್ನು ಖುಷಿಪಡಿಸಲು ಈಗ ಡಿಕೆಶಿ ಉಗ್ರಗಾಮಿಗೇ ಕ್ಲೀನ್ ಚಿಟ್ ಕೊಡುತ್ತಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ವೋಟು ಪಡೆಯಲು ಬೆಂಬಲ ನೀಡ್ತಿದ್ದಾರೆ
ದಿನಬೆಳಗಾದರೆ ಎಣ್ಣೆ ಸೀಗೇಕಾಯಿಯಂತೆ ಒಬ್ಬರ ಮೇಲೊಬ್ಬರು ಸಿಡಿದು ಬೀಳುತ್ತಿರುವ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಈಗ ಮತ್ತೆ ಒಂದಾಗಿರುವುದು ಒಂದೇ ಒಂದು ಉದ್ದೇಶಕ್ಕೆ. ಅದು ಶಾರಿಕ್ ಒಬ್ಬ ಅಮಾಯಕ ಎಂದು ತೋರಿಸಿ, ಅವರ ಮನೆಯ ನಾಲ್ಕು ವೋಟುಗಳನ್ನು ತೆಗೆದುಕೊಳ್ಳುವುದು ಎಂದು ಬಿಜೆಪಿ ಆರೋಪಿಸಿದೆ.
ಪಿಎಫ್ಐ ಭಾಗ 2 ಬೆಳೆಸುವ ಆಲೋಚನೆಯಾ?
ಸಿದ್ದರಾಮಯ್ಯನವರ ತುಷ್ಟೀಕರಣದ ರಾಜಕಾರಣದಿಂದ ಪಿಎಫ್ಐನಂಥ ಉಗ್ರಗಾಮಿ ಸಂಘಟನೆ ಬೆಳೆದು ನಿಂತಿತ್ತು. ಈಗ ಡಿಕೆ ಶಿವಕುಮಾರ್ ಶಾರಿಕ್ ನಂಥವನನ್ನು ಬೆಂಬಲಿಸಿ ಪಿಎಫ್ಐ ಭಾಗ 2ನ್ನು ಬೆಳೆಸುವ ಆಲೋಚನೆಯೇನಾದ್ರೂ ಇದ್ದರೆ ಬಿಡುವುದು ಒಳ್ಳೆಯದು. ಏಕೆಂದರೆ ಶ್ರೀ ಬಸವರಾಜ ಬೊಮ್ಮಾಯಿ ಸರ್ಕಾರ ಅದನ್ನೂ ಬ್ಯಾನ್ ಮಾಡುತ್ತೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಶಿವಕುಮಾರ್ ಮಾತ್ರ ಉಗ್ರರ ಬೆಂಬಲಿಗರು
ಇವರ ಕಾಂಗ್ರೆಸ್ ನಲ್ಲಿ ಕೇವಲ ಡಿಕೆ ಶಿವಕುಮಾರ್ ಮಾತ್ರ ಉಗ್ರರ ಬೆಂಬಲಿಗ ಎಂದುಕೊಂಡರೆ ಅದು ತಪ್ಪಾಗುತ್ತದೆ. ಉಗ್ರ ಬೆಂಬಲಿಗ ಡಿಕೆಶಿ ಬೆಂಬಲಕ್ಕೆ ಮರಿ ಖರ್ಗೆಯೂ ನಿಂತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಇಡೀ ಕಾಂಗ್ರೆಸ್ಸೇ ಒಟ್ಟಾಗಿ ಉಗ್ರರ ಪರ ಮೆಣದಬತ್ತಿಯ ಮೆರವಣಿಗೆ ಮಾಡಿದರೂ ಅಚ್ಚರಿಯೇನಿಲ್ಲ!
ಕಾಂಗ್ರೆಸ್ ಇದುವರೆಗೂ ಒಮ್ಮೆಯಾದರೂ ದೇಶದ ಪರವಾಗಿ ನಿಂತಿದೆಯಾ ಎಂದು ನೋಡಿದರೆ ಒಮ್ಮೆಯೂ ಇಲ್ಲ!
- ಸರ್ಜಿಕಲ್ ಸ್ಟ್ರೈಕ್ಗೆ ಸಾಕ್ಷಿ ಕೇಳಿದ್ರು
- ಯೋಧರ ಸಾಮರ್ಥ್ಯ ಪ್ರಶ್ನಿಸಿದ್ರು
- ಚೀನಾ ಜೊತೆ ವ್ಯವಹಾರ ಮಾಡಿದ್ರು
- ವಿದೇಶದಲ್ಲಿ ಭಾರತವನ್ನು ತೆಗಳಿದ್ರು
ಇಂಥವರಾ ದೇಶದ ಚುಕ್ಕಾಣಿ ಹಿಡಿಯ ಹೊರಟವರು?
ದೇಶದ ಭದ್ರತೆಯ ವಿಚಾರದಲ್ಲೂ ಗಟ್ಟಿಯಾಗಿ ನಾವು ದೇಶದ ಪರ, ಉಗ್ರನನ್ನು ಬೆಂಬಲಿಸುವ ದರ್ದು ನಮಗೆ ಬಂದಿಲ್ಲ ಎಂದು ಹೇಳಲೂ ಆಗದ ಜನತಾ ದಳ ಕಾಂಗ್ರೆಸ್ನ ಬಿ ತಂಡವಲ್ಲದೇ ಇನ್ನೇನು? ಮತದಾರರು ನಿರ್ಧರಿಸಿದ್ದಾರೆ. ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಬೆಂಬಲಿಸಲು. ಹಾಗೇ, ಉಗ್ರರನ್ನು ಬೆಂಬಲಿಸುವ ಕಾಂಗ್ರೆಸ್’ಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಬಿಜೆಪಿ ಟ್ವೀಟ್ ಮೂಲಕ ಕಿಡಿಕಾರಿದೆ.